ಸುಬ್ಬಣ್ಣ ತಮ್ಮ ಹಳ್ಳಿಯಿಂದ ಮೈಸೂರಿಗೆ ಹೋದರು. ನಾಲ್ಕಾರು ವರ್ಷ ಅಲ್ಲಿ ಇದ್ದರು. ಆಧುನಿಕ ವಿದ್ಯಾಭ್ಯಾಸ ಪಡೆದು ತಮ್ಮ ಹಳ್ಳಿಗೇ ಮರಳಿದರು. ಅಲ್ಲಿ ತಮ್ಮದೇ ಆದ ಹೊಸ ಜೀವನಕ್ರಮವೊಂದನ್ನು ನಿಧಾನವಾಗಿ ರೂಪಿಸಿಕೊಂಡರು. ಈ ಮಾದರಿ ನಮ್ಮ ಮುಖ್ಯ ಕಥೆ ಕಾದಂಬರಿಗಳು ಕಟ್ಟಿರುವ ಮಾದರಿಯೂ ಹೌದು ಎಂಬುದು ಒಂದು ಕುತೂಹಲಕಾರಿ ಸತ್ಯ. ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’, ಕಾರಂತರ ‘ಮರಳಿಮಣ್ಣಿಗೆ’, ‘ಸಮೀಕ್ಷೆ’, ‘ಮೂಕಜ್ಜಿಯ ಕನಸುಗಳು’, ‘ಇನ್ನೊಂದೇ ದಾರಿ’ ಇತ್ಯಾದಿ ಕಾದಂಬರಿಗಳು, ಅನಂತಮೂರ್ತಿಯವರ ‘ಭಾರತೀಪುರ’ ಮುಂತಾಗಿ ಕನ್ನಡ ಸಾಹಿತ್ಯ ನಮ್ಮ ಸಾಮಾಜಿಕ ಚಲನಿಯ ಒಂದು ಮುಖ್ಯ ಮಾದರಿಯನ್ನು ಗಮನಿಸಿದೆಯಷ್ಟೆ. ಸುಬ್ಬಣ್ಣನವರ ಜೀವನ ಕ್ರಮದ ಮಾದರಿ ಈ ಆಕೃತಿಗೆ ಸಮೀಪವಾದದ್ದು. ಹಾಗಾಗಿ ಸುಬ್ಬಣ್ಣ ಹಳ್ಳಿಗೆ ಮರಳಿದಾಗ ಅವರು ಕೇವಲ ಹಳೆಯ ಜೀವನಕ್ರಮವನ್ನು ಮುಂದುವರಿಸುವ ಮನಸ್ಥಿತಿಯುಳ್ಳವರಾಗಿರಲು ಸಾಧ್ಯವಿರಲಿಲ್ಲ. ಹಾಗೆಂದು ಸ್ಥಳೀಯ ಜೀವನಕ್ರಮಕ್ಕಿಂತ ತೀರಾ ಭಿನ್ನವಾದ ತೀರಾ ವೈಯಕ್ತಿಕವಾದ, ಪ್ರತ್ಯೇಕವಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹಳತು-ಹೊಸತರ ಸೃಜನಶೀಲ ಅನುಸಂಧಾನ ಪ್ರಕ್ರಿಯೆಯಲ್ಲೇ ಅವರು ತಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗಿದ್ದಂತೆ ಸಾಮಾಜಿಕ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕಾಯಿತು.
-ಟಿ.ಪಿ. ಅಶೋಕ
(‘ಅರೆಶತಮಾನದ ಅಲೆಬರಹಗಳು’ ಪುಸ್ತಕದ ಮುನ್ನುಡಿಯಿಂದ)
Additional information
| Number of pages | 168 |
|---|---|
| Year of Publication | 1st Edition- 2005, 3rd Edition- 2017 |
| Author | ಕೆ.ವಿ. ಸುಬ್ಬಣ್ಣ |
| eBook |





Reviews
There are no reviews yet.