ಇಲ್ಲಿನ ಕವಿತೆಗಳು ಉದಯೋನ್ಮುಖ ಕವಿಯೊಬ್ಬಳ ತೊದಲು ನುಡಿಗಳಲ್ಲ. ಕಾವ್ಯ-ಸಂಗೀತಗಳ ಸತತ ಅಭ್ಯಾಸ ಮತ್ತು ಪ್ರಯೋಗಗಳಿಂದ ಸಂಸ್ಕಾರ ಪಡೆದ ಹಾಗೂ ತುಂಬು ಸಂಸಾರ ನಡೆಸುತ್ತಿರುವ ಗೃಹಿಣಿಯೊಬ್ಬಳ ಗಾಢವಾದ ಜೀವನಾನುಭವಗಳಿಂದ ಮಾಗಿದ ಮನಸ್ಸಿನ ಉಕ್ತಿಗಳು. ಸಮುದ್ಯತಾ ಅವರಿಗೆ ಕಾವ್ಯವೆಂದರೇನು ಎಂಬುದು ಗೊತ್ತಿದೆ. ಹಾಗೆಯೇ ಯಾವುದು ಕಾವ್ಯವಾಗಲಾರದು ಎಂಬ ಎಚ್ಚರವೂ ಇದೆ...
ಎಲ್ಲವನ್ನೂ ತೂಗಿಸಿಕೊಂಡು, ಸಮತೋಲನಗೊಳಿಸಿಕೊಂಡು ಕಾವ್ಯ ಕಟ್ಟುವುದು ಮತ್ತು ಬದುಕನ್ನು ಕಟ್ಟಿಕೊಳ್ಳುವುದು ಸಮುದ್ಯತಾ ಅವರ ಪ್ರಧಾನ ಹಂಬಲವೆಂದು ತೋರುತ್ತದೆ. ಕಾವ್ಯದಲ್ಲಿ ಭಾವ-ಭಾಷೆಗಳು, ಭಾವುಕತೆ-ಬೌದ್ಧಿಕತೆಗಳು ಜೊತೆಗೂಡಬೇಕು. ಅಭಿವ್ಯಕ್ತಿಯ ಸಫಲತೆಗೆ ಓದುಗನ ಸಹಭಾಗಿತ್ವವೂ ಬೇಕು. ಸಂಸಾರ ಮಧುರವಾಗಿರಲು ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಇದೊಂದು ಯಾಂತ್ರಿಕ ಸಮೀಕರಣವಲ್ಲ ಎಂಬುದು ಕವಿಗೆ ಚೆನ್ನಾಗಿ ಗೊತ್ತಿದೆ. ಒಟ್ಟಾಗಿ ಹೆಜ್ಜೆ ಹಾಕುವ ಅಗತ್ಯ-ಅನಿವಾರ್ಯತೆ ಮತ್ತು ಅದರ ಕಷ್ಟಗಳನ್ನು ಒಟ್ಟಿಗೇ ಗಮನಿಸುವ ವ್ಯವಧಾನ ಅವರಿಗಿದೆ. ಹೀಗಾಗಿ ಸಮುದ್ಯತಾ ಅವರ ಕವಿತೆಗಳು ಕೇವಲ ಭಾವದಲ್ಲಿ ಸ್ರವಿಸುವುದಿಲ್ಲ. ಅವುಗಳಲ್ಲಿ ಚಿಂತನೆಯ, ಧ್ಯಾನದ ಆಯಾಮಗಳೂ ಒಂದು ಹದದಲ್ಲಿ ಕರಗಿಕೊಂಡಿವೆ...
ಮುಖ್ಯವಾದ ಮಾತೆಂದರೆ ಸಮುದ್ಯತಾ ಅವರ ಕವಿತೆಗಳು ಈಗಾಗಲೇ ಖಚಿತವಾಗಿರುವ ಸತ್ಯಗಳ ಏಕಮುಖ ಮಂಡನೆಗಳಲ್ಲ. ಕಾವ್ಯಸ್ವರೂಪವನ್ನೂ, ಜೀವನದ ಸ್ವರೂಪವನ್ನೂ ಅನುಭವದಲ್ಲಿ, ಪ್ರಯೋಗದಲ್ಲಿ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು. ಅವರ ಕಾವ್ಯದ ಸಫಲತೆ-ಅಸಫಲತೆಗಳಿಗಿಂತ ನಮಗೆ ತಟ್ಟುವುದು ಅದರ ಹಿಂದಿನ ಆರ್ತತೆ ಮತ್ತು ವಿಸ್ಮಯ.
- ಟಿ.ಪಿ. ಅಶೋಕ (ಮುನ್ನುಡಿಯಲ್ಲಿ)
Additional information
| Number of pages | 118 |
|---|---|
| Year of Publication | 2022 |
| Author | ಸಮುದ್ಯತಾ ವೆಂಕಟರಾಮು |





Reviews
There are no reviews yet.