ರಾಮಮನೋಹರ ಲೋಹಿಯಾ ಅವರು ಬದುಕಿನ ಬಹುಮುಖದ ಸವಾಲುಗಳ ದ್ವಂದ್ವಸಮೃದ್ಧಿಯಲ್ಲಿ ಸಮಸ್ತಕ್ಕೂ ಎಚ್ಚರಾಗಿ ಚುರುಕಾಗಿ ಉಳಿದಿರಲು, ಕಲಾವಿದನ ಹಾಗೆ ಹೆಣಗುತ್ತ, ಇಂಡಿಯಾದ ಬದುಕು ಮೂಲತಃ ಬದಲಾಗತಕ್ಕದ್ದೆಂದು ತಿಳಿದು ಅದಕ್ಕಾಗಿ ಕ್ರಾಂತಿಕಾರನ ಏಕೋದೃಢ ಮನಸ್ಸಿಂದ ಹೋರಾಡಿದ ವಿಶಿಷ್ಟ ವ್ಯಕ್ತಿ. ಅವರು ಕಲಾವಿದನ ಹಾಗೆ ಕಾಲದ ಒಂದೊಂದು ಕ್ಷಣವನ್ನೂ ಇತಿಹಾಸದ ಹೊರಗೆ ನಿಲ್ಲಬಲ್ಲ ಅನಂತವನ್ನಾಗಿ ಕಂಡವರು; ಹಾಗೇ, ರಾಜಕೀಯ ಕ್ರಾಂತಿಕಾರನಾಗಿ ಇತಿಹಾಸದ ಪ್ರಜ್ಞೆಯುಳ್ಳವರಾಗಿ ಕಾಲವೆಂಬುದು ಬದಲಾಗಬಹುದಾದ್ದು ಬದಲಾಯಿಸಬೇಕಾದ್ದು ಎಂಬುದನ್ನೂ ಕಂಡವರಾಗಿದ್ದರು. ತನ್ನ ಕಾಣ್ಕೆಗೆ, ತನ್ನ ಅನುಭವ ಅನ್ನಿಸಿಕೆಗಳಿಗೆ ಪ್ರಾಮಾಣಿಕವಾಗಿ ಬದುಕುತ್ತೇನೆ ಎಂದು ಹೊರಟಿದ್ದರಿಂದ ಅವರು ಪ್ರಜಾಸತ್ತಾವಾದಿ ಮತ್ತು ಕ್ರಾಂತಿಕಾರಿ ಎರಡೂ ಆಗಬೇಕಾಯಿತು. ಬುದ್ಧಿಜೀವಿಗಳಿಗೂ ಲೇಖಕರಿಗೂ ಅವರ ವ್ಯಕ್ತಿತ್ವ ಆಕರ್ಷಣೀಯವಾಗಿರುವುದಕ್ಕೆ ಕಾರಣ – ಆತ ದೇಶದ ರಾಜಕೀಯ ಕ್ಷೇತ್ರದಲ್ಲಿ ಮುಳುಗಿಹೋಗಿದ್ದರೂ, ತನ್ನ ಪಕ್ಷದ ಕೈಯಲ್ಲೇ ಮೇಲೆ ಮೇಲೆ ಆಘಾತಗಳನ್ನೆದುರಿಸಬೇಕಾಗಿ ಬಂದಿರಬಹುದಾಗಿದ್ದರೂ, ಮಧ್ಯೆ ಅವನ್ನೆಲ್ಲ ಮೀರಿ, ತನ್ನ ವ್ಯಕ್ತಿತ್ವದ ಕಲಾತ್ಮಕ ಭಾಗಕ್ಕೂ ಎಚ್ಚರಿದ್ದು ಮೈಗೊಡಬಲ್ಲವರಾಗಿದ್ದರು ಎಂಬುದು. ಲೋಹಿಯಾ ಇಂಡಿಯಾಕ್ಕೆ ಬದ್ಧರಾಗಿದ್ದರು; ಹಾಗಿದ್ದೂ ಶತಮಾನಗಳ ಕಾಲ ನಮ್ಮನ್ನಾವರಿಸಿಕೊಂಡ ಅಸಹ್ಯರಾಶಿಗಳನ್ನು ಕಂಡು ಕ್ರೋಧಗೊಂಡಿದ್ದರು. ಪಶ್ಚಿಮದ ತಾತ್ವಿಕ ಚಿಂತನೆಗಳಲ್ಲಿ ಅವರು ತೀವ್ರ ಆಸಕ್ತಿ ತಾಳಿದ್ದರು; ಹಾಗಿದ್ದೂ ಅಲ್ಲಿನ ದೋಷಗಳ ಬಗ್ಗೆ ಅವರು ನಿಷ್ಠುರ ವಿರೋಧಿಯಾಗಿದ್ದರು. ಆತ ಸತ್ಯದ ಅನೇಕ ಮುಖಗಳಿಗೆ ಎಚ್ಚರಾಗಿದ್ದರು; ಆ ಮೂಲಕ ಮನುಷ್ಯ ಜೀವನದ ಸಂದಿಗ್ಧಗಳನ್ನು ಸರಿಯಾಗಿ ಅರಿತುಕೊಳ್ಳಲು ಯಾವ "ಸಮಸ್ಥಿತಿ" ಬೇಕೋ, ಜೊತೆಗೇ ನಿರಾಕಾರವಾಗಿಬಿಡದ ಯಾವ ನಿಶ್ಚಿತ ಬೇಕೋ ಅದನ್ನು ಸೂಚಿಸಿದವರಾಗಿದ್ದರು. ಇಂಡಿಯಾದಲ್ಲಿ ಪುನಃ ಬದುಕನ್ನು. ಸಮೃದ್ಧಗೊಳಿಸಲು ಸುಂದರಗೊಳಿಸಲು ಎಂಥ ನಿಶ್ಚಿತ ಪ್ರಯತ್ನ ಮತ್ತು ತೀವ್ರತೆ ಬೇಕೋ ಅದನ್ನು ತನ್ನ ಬದುಕಿನುದ್ದವೂ ನಡೆಸಿದ ಏಕೋದೃಢ ಹೋರಾಟದಲ್ಲಿ ಪಡೆದುಕೊಂಡವರಾಗಿದ್ದರು.
ಯು.ಆರ್. ಅನಂತಮೂರ್ತಿ
Additional information
| Number of pages | 266 |
|---|---|
| Year of Publication | 1st Edition- 1998, 2nd Edition- 2021 |
| Author | ರಾಮಮನೋಹರ ಲೋಹಿಯಾ |
| Translator / Editor | ಕೆ.ವಿ. ಸುಬ್ಬಣ್ಣ |
| eBook |





Reviews
There are no reviews yet.